| |
ಮುಖಪುಟ
/ಸಾಧಕರು
ಮಾತಿನ ಮಲ್ಲನ ಮಹತ್ ಸಾಧನೆ
ಎಂ.ಡಿ. ಕೌಶಿಕ್ಕೂ ಮಂಕುತಿಮ್ಮದ
ಕಗ್ಗದ ಮ್ಯಾಜಿಕ್ಕೂ
*ಟಿ.ಎಂ.ಸತೀಶ್
ಬೆಂಗಳೂರು
: ಮಂಕುತಿಮ್ಮನ ಕಗ್ಗ ಕನ್ನಡದ ಶ್ರೇಷ್ಠಕವಿ ವಿರಕ್ತ ರಾಷ್ಟ್ರಕ
ಡಾ.ಡಿ.ವಿ. ಗುಂಡಪ್ಪನವರ ಅಪ್ರತಿಮ ಕೃತಿಗಳಲ್ಲೊಂದು. ಬದುಕಿನ ಎಲ್ಲ
ಅವಸ್ಥೆಗಳನ್ನೂ, ಬದುಕಿನ ಪ್ರತಿಯೊಂದು ಘಟ್ಟವನ್ನೂ, ನೋವು, ನಲಿವುಗಳನ್ನು
ಅನೂಚಾನವಾಗಿ ತೆರೆದಿಡುವ ಕಗ್ಗ ಕಬ್ಬಿಣದ ಕಡಲೆ ಎಂದೇ ತಿಳಿದವರು ಹೆಚ್ಚು.
ಆದರೆ, ಕಗ್ಗ ಕಬ್ಬಿಣದ ಕಡಲೆಯಲ್ಲ ಅದು ಸವಿದಷ್ಟೂ ಸಗ್ಗ ಎಂದು ನಿರೂಪಿಸುವ ಹೊಸ
ಬಗೆಯ ಯತ್ನವನ್ನು ಹೆಸರಾಂತ ಚಲನಚಿತ್ರ ನಿರ್ದೇಶಕ, ನಟ, ಮಾತಿನಮಲ್ಲ (ಚರ್ಚಾಪಟು)
ಎಂ.ಡಿ.ಕೌಶಿಕ್ ಮಾಡಿ ತೋರಿಸಿದ್ದಾರೆ.
ಬಹುಮುಖ
ಪ್ರತಿಭೆಯ ಕೌಶಿಕ್ ಜಾದೂಗಾರರೂ ಹೌದು. ಆದರೆ ಇವರ ಯಕ್ಷಿಣಿ ಪ್ರದರ್ಶನ ಕೇವಲ
ಮನರಂಜನೆಗಷ್ಟೇ ಸೀಮಿತವಾಗದೆ ಮಾಹಿತಿಯ ಮಹಾಪೂರವನ್ನೇ ಹರಿಸುತ್ತದೆ. ಜಾದೂ
ಪ್ರದರ್ಶನದ ಪ್ರತಿಯೊಂದು ಪ್ರಸಂಗಕ್ಕೂ ಮಂಕುತಿಮ್ಮನ ಕಗ್ಗವನ್ನು ಸಮೀಕರಿಸುವ
ಮುರಳೀಧರ್ ಚಾಕಚಕ್ಯತೆ ಎಲ್ಲರನ್ನೂ ಬೆರಗುಗೊಳಿಸುತ್ತದೆ.
ಬಾಲ್ಯದಿಂದಲೂ ಶಾಲಾ ಕಾಲೇಜು ಕನ್ನಡ ಚರ್ಚಾಸ್ಪರ್ಧೆ, ಏಕಪಾತ್ರಾಭಿನಯ, ಮಿಮಿಕ್ರೀ
ಸ್ಪರ್ಧೆಗಳಲ್ಲಿ ಪಾಲ್ಗೊಂಡು ನೂರಾರು ಪಾರಿತೋಷಕ, ಬಹುಮಾನ ಪಡೆದ ಕೌಶಿಕ್
ಅತ್ಯುತ್ತಮ ವಾಗ್ಮಿ. ಗೆಳೆಯರ ಬಳಗದಲ್ಲಿ ಮಾತಿನ ಮಲ್ಲ ಎಂದೇ ಹೆಸರಾದವರು. ನಾಟಕ,
ಹಾಸ್ಯ, ನಟನೆ, ನಿರ್ದೇಶನ ಹೀಗೆ ವಿವಿಧ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ
ಕೌಶಿಕ್
ವಕೀಲರಾಗಬೇಕೆಂದು
ಕಾನೂನು ಪದವಿ ಪಡೆದರು. ಆದರೆ ನಟನೆಯ ತುಡಿತದಿಂದ ಕರಿ ಕೋಟಿಗೆ ಗುಡ್ಬೈ ಹೇಳಿ
ಚಿತ್ರರಂಗಕ್ಕೆ ಧುಮುಕಿದರು,
ಮುಖವಾಡ (ರಾಮಕೃಷ್ಣ ,
ಜಯಂತಿ, ತಾರಾ),
ಪ್ರೇಮ ಕಾವ್ಯ (ಸುನೀಲ್,
ಮಾಧುರಿ,
ರಮೇಶ್ಭಟ್)
ಮಹಾಯುದ್ಧ (ಶಂಕರ್ನಾಗ್,
ವಿನೋದ್,
ಮಹಾಲಕ್ಷ್ಮಿ), ರಂಭೆ ನೀ
ವಯ್ಯಾರದ ಗೊಂಬೆ (ಕೌಶಿಕ್,
ಅಖಿಲಾ) ಚಲನಚಿತ್ರಗಳನ್ನು ನಿರ್ದೇಶಿಸಿದರು.
ಹಲವು
ಚಲನಚಿತ್ರಗಳಲ್ಲಿ, ಧಾರವಾಹಿಗಳಲ್ಲಿ ನಟರಾಗಿ ನಟಿಸಿದರು. ತಿರುವುಗಳು,
ಹೀಗೂ ಉಂಟೆ,
ಗಗನ ಕುಸುಮ,
ನಾವಿರೋದೆ ಹೀಗೆ ಎನ್ನುವ
ಜನಪ್ರಿಯ ದೂರದರ್ಶನ ಧಾರಾವಾಹಿಗಳನ್ನು ಕೌಶಿಕ್ ನಿರ್ದೇಶಿಸಿ ಜನಪ್ರಿಯರಾದರು.
ಕೌಶಿಕ್ ನಾಯಕ ನಟರಾಗಿ ನಟಿಸಿ,
ನಿರ್ದೇಶಿಸಿದ ರಂಭೆ ನೀ
ವ್ಯಯಾರದ ಗೊಂಬೆ ಚಿತ್ರ ಅಮೇರಿಕೆಯಲ್ಲಿ ನಡೆದ ಹವೇಲಿ ಅಂತರರಾಷ್ಟ್ರೀಯ ಚಿತ್ರೋತ್ಸವ
(1999) ಹಾಗೂ ಈಜಿಪ್ಟ್ನ ಕೈರೋ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿಯೂ
ಪ್ರದರ್ಶನಗೊಂಡಿತು.
50ಕ್ಕೂ
ಹೆಚ್ಚು ಸಾಕ್ಷ್ಯಚಿತ್ರಗಳನ್ನೂ ನಿರ್ಮಿಸಿ, ನಿರ್ದೇಶಿಸಿರುವ ಕೌಶಿಕ್, ತಾವು
ಕಾಲೇಜು ದಿನಗಳಲ್ಲಿ ಚರ್ಚಾಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾಗ ಓತಪ್ರೋತವಾಗಿ
ಹೇಳುತ್ತಿದ್ದ ಮಂಕುತಿಮ್ಮನ ಕಗ್ಗವನ್ನು ಜಗತ್ತಿಗೇ ಪರಿಚಯಿಸುವ ಯೋಚನೆ ಮಾಡಿದರು.
ಇದಕ್ಕೊಂದು ಯೋಜನೆಯನ್ನೂ ರೂಪಿಸಿದರು. ತಮಗೆ ಕರಗತವಾಗಿದ್ದ ಯಕ್ಷಿಣಿ
ಪ್ರದರ್ಶನಕ್ಕೆ ಕಗ್ಗವನ್ನು ಸಮೀಕರಿಸಿದರು. ಅರಳು ಹುರಿದಂತೆ ಪಟಪಟನೆ ಕಗ್ಗವನ್ನು
ಹೇಳುವ ಕೌಶಿಕ್ ಜಾದೂ ಮೂಲಕ ಸಾಹಿತ್ಯ ಪರಿಚಾರಕರಾಗಿ ಅದ್ಭುತ ಕಾರ್ಯ
ನಿರ್ವಹಿಸುತ್ತಿದ್ದಾರೆ.
ಸಿಂಗಪುರ್,
ಅಮೆರಿಕಾ, ಇಂಗ್ಲೆಂಡ್,
ಆಸ್ಟ್ರೇಲಿಯಾ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಕೌಶಿಕ್ ತಮ್ಮ ಜಾದೂ ಹಾಗೂ ಕಗ್ಗ
ಪ್ರದರ್ಶನ ನೀಡಿದ್ದಾರೆ. ಮಂಕುತಿಮ್ಮನ ಕಗ್ಗದ ಸುಮಾರು 600 ಪದ್ಯಗಳನ್ನು ತಮ್ಮ
ಮ್ಯಾಜಿಕ್ಗೆ ಕೌಶಿಕ್ ಸೂಕ್ತವಾಗಿ ಅಳವಡಿಸಿಕೊಂಡಿದ್ದಾರೆ. ಒಂದು ಕಡೆ ಕಗ್ಗದ
ಪದ್ಯಕ್ಕೆ ಅರ್ಥ ಹೇಳುತ್ತಲೇ ಅದಕ್ಕೆ ಹೊಂದುವಂತೆ ಮ್ಯಾಜಿಕ್ ಟ್ರಿಕ್ ಅನ್ನು
ತೋರಿಸಿ ಸಭಿಕರಿಂದ ಮೆಚ್ಚುಗೆಗಳಿಸುತ್ತಾರೆ. ರಾಜ್ಯದ ಉದ್ದಗಲ ಕಾರ್ಯಕ್ರಮ ನೀಡಿರುವ
ಕೌಶಿಕ್ ಈ ಅಪರೂಪದ ಸಾಧನೆಗೆ ಹಲವು ಪ್ರಶಸ್ತಿಗಳು, ಪಾರಿತೋಷಕರು ಲಭಿಸಿವೆ.
ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೌಶಿಕ್
ಅವರನ್ನು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆತ್ಮೀಯವಾಗಿ
ಸನ್ಮಾನಿಸಿದ್ದರು.
ಮುಖಪುಟ
/ಸಾಧಕರು |
|
|