|
ಮುಖಪುಟ
/ಸಾಧಕರು
ಪತ್ರಕರ್ತ, ನಾಟಕಕಾರ, ವಾಗ್ಮಿ ಸತೀಶ್
ಸಾವಿರ ಪದಬಂಧಗಳ
ಸರದಾರ ಸತೀಶ್ ಪರಿಚಯ
ಬೆಂಗಳೂರು:
ಮಾತು ಮುತ್ತು ಮಾತೇ ಮೃತ್ಯು. ಮೃದುವಾಗಿ ಮಾತನಾಡಿದರೆ ಮೆಚ್ಚದಿರುವವರಾರು?
ನಾವೆಲ್ಲರೂ ಮಾತನಾಡುತ್ತೇವೆ. ಆದರೆ,
ವೇದಿಕೆಯಲ್ಲಿ ನಿಂತು ನೂರಾರು ಜನ ಮೆಚ್ಚಿ ಕರತಾಡನ ಮಾಡುವಂತೆ
ಮಾತನಾಡುವುದು ಸುಲಭದ ಮಾತಲ್ಲ. ವಾಗ್ಮಿ ಸತೀಶ್ಗದು ನೀರು ಕುಡಿದಷ್ಟೇ ಸುಲಭ.
ಶಾಲೆ ಕಾಲೇಜು
ದಿನಗಳಿಂದಲೂ ಚರ್ಚಾಸ್ಪರ್ಧೆಗಳಲ್ಲಿ ಪಾಲ್ಗೊಂಡು 3೦೦ಕ್ಕೂ ಹೆಚ್ಚು ವೈಯಕ್ತಿಕ
ಬಹುಮಾನ ಹಾಗೂ ೧೦೦ಕ್ಕೂ ಹೆಚ್ಚು ಪರ್ಯಾಯ ಪಾರಿತೋಷಕ ಪಡೆದಿರುವ ಸತೀಶ್ ಮಾತನಾಡಲು
ವೇದಿಕೆಯಲ್ಲಿ ನಿಂತರೆಂದರೆ ನಿರರ್ಗಳವಾಗಿ ಪ್ರಾಸಮಯ ವಗ್ಝರಿ ಉಕ್ಕಿ
ಹರಿಯುತ್ತದೆ. ಕೇಳುಗರು ಮಂತ್ರಮುಗ್ಧರಾಗುತ್ತಾರೆ. ಕರತಾಡನ ಮಾಡಿ ಮೆಚ್ಚುಗೆಯ
ಮಾತನಾಡುತ್ತಾರೆ.
ಮಾತುಗಾರಿಕೆಯ
ಮೇಲೆ ಹಿಡಿತ ಸಾಸಿರುವ ಸತೀಶ್ ಅವರದು ಬಹುಮುಖ ವ್ಯಕ್ತಿತ್ವ. ಲೇಖಕರಾಗಿ, ಪದಬಂಧ
ರಚನೆಕಾರರಾಗಿ, ಕಥೆಗಾರರಾಗಿ,
ನಾಟಕಕಾರರಾಗಿ, ನಟ ನಿರ್ದೇಶಕರಾಗಿ
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸತೀಶ್ ವೃತ್ತಿಯಲ್ಲಿ ಪತ್ರಕರ್ತರು.
ಕನ್ನಡನಾಡಿನ ಜನಪ್ರಿಯ ದಿನ ಪತ್ರಿಕೆ ‘ಕನ್ನಡಪ್ರಭ’ದಲ್ಲಿ
ಹನ್ನೆರಡು ವರ್ಷ ಕಾಲ ಸೇವೆ ಸಲ್ಲಿಸಿದ ಸತೀಶ್,
ಆನಂತರ ಕನ್ನಡದ ಮೊಟ್ಟ ಮೊದಲ ಪೋರ್ಟಲ್
ಕನ್ನಡ.ಇಂಡಿಯಾಇನ್ಫೋ.ಕಾಂನಲ್ಲಿ ಮುಖ್ಯ ಉಪಸಂಪಾದಕರಾಗಿ ಅದರ ಉತ್ಥಾನಕ್ಕೆ
ಶ್ರಮಿಸಿದವರು.
ಮುದ್ರಣ
ಮಾಧ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮಗಳೆರಡರಲ್ಲೂ ಸೇವೆ ಸಲ್ಲಿಸಿರುವ ಸತೀಶ್
ಬೆಂಗಳೂರು ಆಕಾಶವಾಣಿ,
ದೂರದರ್ಶನ ಸುದ್ದಿ ವಿಭಾಗದಲ್ಲಿ ಕ್ಯಾಷುಯಲ್ ಎಡಿಟರ್ ಆಗಿ,
ಕನ್ನಡರತ್ನ.ಕಾಂ ಹಾಗೂ ಮಾಸಿಕದ ಗೌರವ ಪ್ರಧಾನ ಸಂಪಾದಕರಾಗಿಯೂ
ಸೇವೆ ಸಲ್ಲಿಸಿದ್ದಾರೆ. ವಕೀಲರಾಗಿಯೂ ಕೆಲ ಕಾಲ ವೃತ್ತಿ ನಡೆಸಿದ ಸತೀಶ್
ಪತ್ರಿಕೋದ್ಯಮದ ತುಡಿತದಿಂದ ಹೊರಬರಲಾಗದೆ ಪ್ರಸ್ತುತ
ಕನ್ನಡರತ್ನ.ಕಾಂನ ಗೌರವ ಪ್ರಧಾನ
ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಹಿತ್ಯ
ರಚನೆ ಪತ್ರಿಕೋದ್ಯಮದ ಜೊತೆಗೆ ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ
ಸತೀಶ್ ಉತ್ತಮ ಸಂಘಟಕರೂ ಹೌದು. ಕರ್ನಾಟಕದ ಎಲ್ಲ ಪತ್ರಕರ್ತರ ಮಾತೃ ಸಂಘಟನೆಯಾದ
‘ಕರ್ನಾಟಕ
ಕಾರ್ಯನಿರತ ಪತ್ರಕರ್ತರ ಸಂಘ’ದ
ಕಾರ್ಯದರ್ಶಿಯಾಗಿ,
ಉಪಾಧ್ಯಕ್ಷರಾಗಿ, ಖಜಾಂಚಿಯಾಗಿ,
ರಾಷ್ಟ್ರೀಯ ಮಂಡಳಿ ಸದಸ್ಯರಾಗಿ,
ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನಿರ್ದೇಶಕರಾಗಿ,
ಉಪಾಧ್ಯಕ್ಷರಾಗಿಯೂ ದುಡಿದಿದ್ದು, ಸ್ವಾಮಿ ವಿವೇಕಾನಂದ
ಪ್ರಸಾರ ಕೇಂದ್ರದ ಸಂಚಾಲಕರಾಗಿ, ಕರ್ನಾಟಕ
ಚರ್ಚಾವೇದಿಕೆಯ ಉಪಾಧ್ಯಕ್ಷರಾಗಿ ರಾಜ್ಯದ ವಿವಿಧ ಶಾಲೆ -ಕಾಲೇಜುಗಳಲ್ಲಿ ಸಾವಿರಾರು
ಕಾರ್ಯಕ್ರಮ ನಡೆಸಿದ್ದಾರೆ.
ಕನ್ನಡಪ್ರಭ
ದಿನಪತ್ರಿಕೆಗೆ ಎರಡೂವರೆ ಸಾವಿರ ಕನ್ನಡ ಪದಬಂಧಗಳನ್ನು (cross
word puzzles) ರಚಿಸಿದ ಸತೀಶ್ ಶಿವಮೊಗ್ಗದಲ್ಲಿ ನಡೆದ ೨೧ನೇ
ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ವಾರ್ಷಿಕ
ವಿಶೇಷ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ೧೯೯೮ರ ಡಿಸೆಂಬರ್ ೨ರಂದು ಶ್ರೀಲಂಕಾದ
ಕೊಲಂಬೋದಲ್ಲಿ ನಡೆದ ಪತ್ರಕರ್ತರ ಸಮಾವೇಶದಲ್ಲಿ ಕರ್ನಾಟಕ
ಕಾರ್ಯನಿರತ ಪತ್ರಕರ್ತರ
ಸಂಘದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದಾರೆ.
ಆಶುಭಾಷಣ
ಸ್ಪರ್ಧೆ,
ಏಕಪಾತ್ರಾಭಿನಯ, ಅಂತರಕಾಲೇಜು ನಾಟಕ
ಸ್ಪರ್ಧೆಗಳಲ್ಲೂ ಸತೀಶ್ ಹಲವಾರು ಬಹುಮಾನಗಳನ್ನು ಗಳಿಸಿದ್ದಾರೆ. ಸತೀಶ್ ರಚಿಸಿದ
ಹಾಗೂ ರೂಪಾಂತರಿಸಿದ ‘ಹೆತ್ತೊಡಲು’
‘ವೆಂಕಟರಾಯನ
ಪಿಶಾಚ’ ‘ಒಂದು
ಸಾವಿನ ಸುತ್ತ’ ‘ಚಿನ್ನದಹೂವು’
‘ಹುತ್ತದಿಂದ
ಎದ್ದು ಬಂದಾತ’ ‘ನಡುರಾತ್ರಿ
ಹನ್ನೆರಡು’ ‘ಅರಿವು
ಕಣ್ತೆರೆಯಿತು’ ‘ಕಂಪಾರ್ಟ್ಮೆಂಟ್ನಲ್ಲೊಂದು
ಕೊಲೆ’
ಸೇರಿದಂತೆ ೨೬ನಾಟಕಗಳು
ಬೆಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಹಲವಾರು ನಾಟಕಗಳು ಮಂಗಳೂರು,
ಭದ್ರಾವತಿ, ಚಿತ್ರದುರ್ಗ ಆಕಾಶವಾಣಿ
ಕೇಂದ್ರಗಳಿಂದಲೂ ಮರುಪ್ರಸಾರ ಆಗಿವೆ. ನಾಟಕಕಾರರಷ್ಟೇ ಅಲ್ಲದೆ ರಂಗ ಕಲಾವಿದರೂ ಆದ
ಸತೀಶ್ ತಾವೇ ಕಟ್ಟಿದ ‘ನಟ
ಕಲಾವಿದರು’
ತಂಡದಿಂದ ಹಲವಾರು ರಂಗಪ್ರಯೋಗಗಳನ್ನು ಯಶಸ್ವಿಯಾಗಿ
ನಡೆಸಿದ್ದಾರೆ. ಹಲವಾರು
ನಾಟಕಗಳನ್ನೂ ನಿರ್ದೇಶಿಸಿದ್ದಾರೆ.
ಬೆಂಗಳೂರು ದೂರದರ್ಶನ
ಚಂದನವಾಹಿನಿಯ ನೇರ ಫೋನ್ ಇನ್ ಕಾರ್ಯಕ್ರಮಗಳಾದ ಹಲೋ ಗೆಳೆಯರೆ,
ರೆಡ್ಬಾಕ್ಸ್, ಜೀವನದರ್ಶನ ಮತ್ತು
ಪ್ರಸಕ್ತ ವಿದ್ಯಮಾನಗಳ ಬಗ್ಗೆ
ಬೆಳಕುಚೆಲ್ಲುವ ಪ್ರಚಲಿತ ಕಾರ್ಯಕ್ರಮಗಳನ್ನು
ನಡೆಸಿಕೊಡುತ್ತಿದ್ದಾರೆ.
ಕರ್ನಾಟಕದ
ಪ್ರವಾಸಿ ತಾಣಗಳನ್ನು ಪರಿಚಯಿಸುವ ತಾಣ-ಯಾನ ಹಾಗೂ ಹಲವು ಸಾಕ್ಷ್ಯಚಿತ್ರಗಳಿಗೆ
ನಿರೂಪಣಾ ಸಾಹಿತ್ಯವನ್ನೂ ಒದಗಿಸಿದ್ದಾರೆ.
ಮೂಲತಃ
ತುಮಕೂರು ಜಿಲ್ಲೆಯ
ತುರುವೇಕೆರೆಯವರಾದ ಸತೀಶ್ ಬಿ.ಕಾಂ,
ಎಲ್ಎಲ್ಬಿ
ಪದವೀಧರರು.
ಆಕಾಶವಾಣಿ,
ದೂರದರ್ಶನಗಳಲ್ಲಿ ನೂರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು
ನೀಡಿರುವ ಸತೀಶ್, ‘ಜೀವಜಗತ್ತು
’
ಮೊದಲಾದ ದೂರದರ್ಶನದ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಸತೀಶ್
ಕವಿವಾಣಿ, ಮಂಕುತಿಮ್ಮನ ಕಗ್ಗ,
ಸರ್ವಜ್ಞವಚನ, ಸುಭಾಷಿತಗಳನ್ನು
ಸೂಕ್ತವಾಗಿ ಬಳಸಿಕೊಂಡು, ತಮ್ಮ ಪ್ರಾಸಮಯ ವಾಗ್ಝರಿಯಿಂದ
ವಿಭಿನ್ನ ಶೈಲಿಯಲ್ಲಿ
ಕಾರ್ಯಕ್ರಮಗಳನ್ನೂ ನಿರೂಪಿಸುತ್ತಾರೆ.
ಕಲೆ,
ಸಾಹಿತ್ಯ, ಚಲನಚಿತ್ರ,
ಕ್ರೀಡೆ, ವಾಣಿಜ್ಯ,
ವಿಜ್ಞಾನ, ವ್ಯಕ್ತಿತ್ವ ವಿಕಾಸ...
ಹೀಗೆ ವಿವಿಧ ವಿಭಾಗಗಳಲ್ಲಿ ಸತೀಶ್ ಬರೆದಿರುವ ನೂರಾರು ಲೇಖನಗಳು ಪ್ರಕಟವಾಗಿವೆ.
ವಿವಿಧ ವಿಷಯಗಳ ಬಗ್ಗೆ ಸತೀಶ್ ವಿಚಾರಗೋಷ್ಠಿಗಳಲ್ಲಿ ತಮ್ಮ ವಿಚಾರಧಾರೆ
ಹರಿಸಿದ್ದಾರೆ. ಕನ್ನಡಪರ ಹೋರಾಟಗಳಲ್ಲಿ
ಸಕ್ರಿಯವಾಗಿ
ಪಾಲ್ಗೊಂಡಿದ್ದಾರೆ.
ಸಾಹಿತ್ಯ ಕಲೆ,
ಸಂಸ್ಕೃತಿ, ಸಮಾಜ ಸೇವೆ,
ಪತ್ರಿಕೋದ್ಯಮ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು
ತೊಡಗಿಸಿಕೊಂಡ ಸತೀಶ್ ಅವರನ್ನು ಈ ನಾಡಿನ ಹಾಗೂ ಹೊರನಾಡಿ ಹಲವು ಸಂಘ ಸಂಸ್ಥೆಗಳು
ಸನ್ಮಾನಿಸಿವೆ. ಗೌರವಿಸಿವೆ.
ಟಿ.ಎಂ.ಸತೀಶ್ ಬಗ್ಗೆ
ಪತ್ರಿಕೆಗಳಲ್ಲಿ ಬಂದಿರುವ ಕೆಲವು ಲೇಖನಗಳು
ಮುಖಪುಟ
/ಸಾಧಕರು |