|
ಆಯುಧಪೂಜೆ ಎಂಬ ವಿಶಿಷ್ಟ ಆಚರಣೆ *ಟಿ.ಎಂ.ಸತೀಶ್
ಇಂಥ ಒಂದು ವಿಶಿಷ್ಟ ಸಂಪ್ರದಾಯವನ್ನು ಮತ್ತೆಲ್ಲೂ ನೋಡಲು ಸಾಧ್ಯವೇ ಇಲ್ಲ. ನಮ್ಮನ್ನು ವರ್ಷವಿಡೀ ನಾವು ಬಯಸಿದ ಸ್ಥಳಕ್ಕೆ ಕರೆದೊಯ್ಯುವ ವಾಹನಗಳಿಗೆ ಅದೂ ನಿರ್ಜೀವ ವಸ್ತುಗಳಿಗೆ ಪೂಜೆ ಸಲ್ಲಿಸುವುದು ಕರ್ನಾಟಕದಲ್ಲಿ ಮಾತ್ರವೇ ಸಾಧ್ಯ. ಅಂಥ ಶ್ರೀಮಂತ ಸಂಸ್ಕೃತಿಯ ನೆಲೆ ಕರ್ನಾಟಕಕ್ಕಿದೆ. ಮೈಸೂರು ಮಹಾರಾಜರು ದಸರಾ ಮಹೋತ್ಸವದ ೧೦ ದಿನಗಳ ಉತ್ಸವದ ೯ನೇ ದಿನ ಅಂದರೆ ಮಹಾನವಮಿಯ ದಿನವನ್ನು ಆಯುಧಪೂಜೆ ಎಂದೇ ಆಚರಿಸುತ್ತಿದ್ದರು. ತಮ್ಮನ್ನು ಶತ್ರುಗಳಿಂದ ರಕ್ಷಿಸಲು ನೆರವಾಗುತ್ತಿದ್ದ ಆಯುಧಗಳಿಗೆ ಪೂಜೆ ಮಾಡುತ್ತಿದ್ದ ಕಾರಣ ಈ ಉತ್ಸವಕ್ಕೆ ಆಯುಧಪೂಜೆ ಎಂದೇ ಹೆಸರು ಬಂದಿದೆ. ಇಂದಿಗೂ ಈ ಆಚರಣೆ ಆಯುಧಪೂಜೆ ಎಂದೇ ಖ್ಯಾತವಾಗಿದೆ. ಮೈಸೂರು ಸೀಮೆಯಲ್ಲಿ ಇಂದಿಗೂ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಇರುವ ಚಾಕು, ಕತ್ತರಿಯೇ ಮೊದಲಾದ ಆಯುಧಗಳಿಗೆ ಪೂಜೆ ಸಲ್ಲಿಸಿ, ತಮ್ಮ ಬಳಿ ಇರುವ ವಾಹನಗಳಿಗೆ ಯಥಾಶಕ್ತಿ ಪೂಜೆ ಸಲ್ಲಿಸುತ್ತಾರೆ. ಅಂಗಡಿ, ಮಳಿಗೆಗಳಲ್ಲಿ ಕೂಡ ತಕ್ಕಡಿಯಿಂದ ಹಿಡಿದು ಎಲ್ಲ ಸಾಧನ ಸಲಕರಣೆಗಳಿಗೆ ಪೂಜೆ ಸಲ್ಲಿಸುವುದು ವಾಡಿಕೆ.
ಸಾರಿಗೆ ವಾಹನ ಚಾಲಕರು, ತಮ್ಮ ವಾಹನಗಳಿಗೆ ಹೂವಿನಿಂದ ಬಗೆ ಬಗೆಯ ಅಲಂಕಾರ ಮಾಡುತ್ತಾರೆ. ಚಿತ್ತಾರದ ಬಣ್ಣದ ಕಾಗದ ಅಂಟಿಸಿ ಸಿಂಗರಿಸುತ್ತಾರೆ. ತಮ್ಮ ಗೆಳೆಯನಿಗಿಂಥ ತಾನು ಚೆನ್ನಾಗಿ ವಾಹನ ಸಿಂಗರಿಸಬೇಕೆನ್ನುವ ಪೈಪೋಟಿಯೂ ನಡೆಯುತ್ತದೆ. ಕೆಲವು ವಾಹನ ಚಾಲಕರಂತೂ ತಮ್ಮ ವಾಹನದ ಗಾಜುಗಳನ್ನು ಕೂಡ ಹೂವಿನಿಂದ ಮುಚ್ಚಿ ಬಿಡುತ್ತಾರೆ. ರಸ್ತೆಯೇ ಕಾಣದಂತೆ ಹೂವಿನಿಂದ ಅಲಂಕಾರ ಮಾಡಿ ಅಪಾಯವನ್ನು ಆಹ್ವಾನಿಸುವ ಸಾಧ್ಯತೆಯೂ ಈ ಪೈಪೋಟಿಯಲ್ಲಿ ಇಲ್ಲದಿಲ್ಲ. ಕೆಲವರು ತಮ್ಮ ವಾಹನಗಳಿಗೆ ಪ್ರಾಣಿ ಬಲಿಯನ್ನೂ ಕೊಡುತ್ತಾರೆ. ಸರ್ಕಾರ ವಾಹನಗಳಿಗೆ ಪ್ರಾಣಿ ಬಲಿ ಕೊಡುವುದನ್ನು ನಿಷೇಧಿಸಿದೆ. ಆದಾಗ್ಯೂ, ಕೋಳಿ, ಕುರಿಗಳು ಯಥೇಚ್ಚವಾಗಿ ವಾಹನಗಳಿಗೆ ಬಲಿಯಾಗುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಆಯುಧಪೂಜೆ ಸಲುವಾಗಿ ಮಾಂಸದ ಚೀಟಿ ಹಾಕುವುದೂ ಉಂಟು. ಆದರೆ, ಸಾತ್ವಿಕರು, ತಮ್ಮ ಈ ಬಲಿ ಪೂಜೆಗೆ ನಿಂಬೆ ಹಣ್ಣು ಹಾಗೂ ಕುಂಬಳಕಾಯಿಯನ್ನು ಮಾತ್ರ ಆಶ್ರಯಿಸುತ್ತಾರೆ. ಹೀಗಾಗೆ ಇಂದು ರಸ್ತೆ ರಸ್ತೆಗಳಲ್ಲಿ ಮಾವಿನ ಸೊಪ್ಪು, ಬಾಳೆಕಂದು, ಕುಂಬಳಕಾಯಿಯ ದರ್ಬಾರು ನಡೆದಿದೆ. ಮಾರುಕಟ್ಟೆ ಪ್ರದೇಶದ ಇಕ್ಕೆಲಗಳಲ್ಲಿ ಕುಂಬಳಕಾಯಿ, ಬಾಳೆಕಂದು ತಮ್ಮ ರಾಜ್ಯಭಾರ ಮಾಡುತ್ತಿವೆ. ಬಾಳೆಕಂದು ತನ್ನ ಅಳತೆಗನುಸಾರವಾಗಿ ಜೋಡಿಗೆ ೧೫ ರೂಪಾಯಿಯಿಂದ ೧೦೦ ರೂಪಾಯಿಯವರೆಗೂ ಮಾರಾಟವಾಗುತ್ತಿದೆ. ಹೂವಿನ ಬೆಲೆ ಗಗನಕ್ಕೆ ಏರಿದೆ. ಸೇವಂತಿಗೆ, ಮಲ್ಲಿಗೆ, ಜಾಜಿ, ಸಂಪಿಗೆ, ಇರುವಂತಿಗೆ ಮಾರಿಗೆ ೬೦ರಿಂದ ೨೦೦ ರೂಪಾಯಿಯಾದರೆ, ಗುಲಾಬಿಯ ಬೆಲೆ ಕೈಗೆಟುಕದಾಗಿದೆ. ಹಾರಗಳ ಬೆಲೆಯಂತೂ ೧೫೦ ರೂಪಾಯಿ ದಾಟಿದೆ. ದೊಡ್ಡ ವರ್ಣರಂಜಿತ ಗುಲಾಬಿ ಹಾರಗಳ ಬೆಲೆ ೫೦೦ ರೂಪಾಯಿ. ಪ್ರಿಂಟಿಂಗ್ ಪ್ರೆಸ್ಗಳು, ಗ್ಯಾರೇಜ್ಗಳು, ವಾಹನ ಮಾರಾಟ ಮಾಡುವ ಷೋರೂಂಗಳು ಸುಣ್ಣ ಬಣ್ಣಗಳಿಂದ ಕಂಗೊಳಿಸುತ್ತಿವೆ. ಬಾಳೆಕಂದು, ಮಾವಿನಸೊಪ್ಪು, ಹೂವಿನಿಂದ ಅಲಂಕೃತಗೊಂಡಿವೆ. ಚಿನ್ನಾರಿ ಕಾಗದದ ಅಲಂಕಾರ ಮನಸೂರೆಗೊಳ್ಳುತ್ತಿದೆ. ಈ ಬಾರಿ ಉತ್ತಮವಾಗಿ ಮಳೆಯಾಗಿರುವ ಹಿನ್ನೆಲೆಯಲ್ಲಿ ನಾಡಿನ ಜನರ ಮೊಗದಲ್ಲಿ ಹರ್ಷದ ನಗೆ ಅರಳಿದ್ದು, ಎಲ್ಲರೂ ಸಂತಸದಿಂದ ನಾಡ ಹಬ್ಬವನ್ನು ಆಚರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. | |||