|
ಏನು ಧನ್ಯಳೋ
‘ತುಳಸಿ’
ಎಂಥಾ ಮಾನ್ಯಳೋ... *ಶೋಭಾ ಸತೀಶ್
ಉತ್ಥಾನ ದ್ವಾದಶಿಗೆ ಕಿರು ದೀಪಾವಳಿ ಎಂಬ ಹೆಸರೂ ಇದೆ. ಅಂದೂ ಮಕ್ಕಳು ಪಟಾಕಿಗಳನ್ನು ಸಿಡಿಸಿ ಆನಂದಿಸುತ್ತಾರೆ. ಕಾರ್ತಿಕ ಶುದ್ಧ ದ್ವಾದಶಿಯ ದಿನ ತುಳಸಿಯ ದರ್ಶನದಿಂದ, ತುಳಸಿ ಪೂಜಿಸುವುದರಿಂದ ಸಪ್ತಜನ್ಮಕೃತ ಪಾಪಗಳು ಕಳೆಯುತ್ತವೆ ಎಂಬುದು ಹಿರಿಯರ ನಂಬಿಕೆ. ತುಳಸಿ ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯ. ತುಳಸಿ, ಪೂಜೆಗೂ ಶ್ರೇಷ್ಠ. ಅಂದು ತುಳಸಿಯ ದರ್ಶನ ಮಾತ್ರದಿಂದ ಪಾಪ ಪರಿಹಾರವಾಗುತ್ತದೆ, ಸ್ಪರ್ಶಮಾತ್ರದಿಂದ ಪವಿತ್ರತೆ ಬರುತ್ತದೆ, ವಂದಿಸುವುದರಿಂದ ರೋಗ ಪರಿಹಾರವಾಗುತ್ತದೆ, ತುಳಸೀತೀರ್ಥ ಪ್ರೋಕ್ಷಣೆಯಿಂದ ಆಯುವೃದ್ಧಿಯಾಗುತ್ತದೆ, ಅಂದು ತುಳಸಿ ಸಸಿ ನೆಡುವುದರಿಂದ ಶ್ರೀಕೃಷ್ಣನ ಸನ್ನಿಧಿ ಲಭ್ಯವಾಗುತ್ತದೆ, ಕೃಷ್ಣ ತುಳಸಿ, ಶ್ರೀ ತುಳಸಿ ಪೂಜಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವುದು ಸನಾತನರ ಅಭಿಪ್ರಾಯ. ತುಳಸಿಯ ಹಿರಿಮೆ: ತುಳಸಿ ಹುಲುಸಾಗಿ ಬೆಳೆದೆಡೆ ಸೊಳ್ಳೆಗಳು ಇರುವುದಿಲ್ಲ. ತುಳಸಿ ಒಂದು ಔಷಧೀಯ ಸಸ್ಯ. ಮಕ್ಕಳಿಗೆ ಕೆಮ್ಮು -ನೆಗಡಿ ಆದರೆ, ತುಳಸಿ ರಸ ಕುಡಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ತುಳಸಿ ಮಾನವನ ಆರೋಗ್ಯಕ್ಕೆ ಸಹಕಾರಿಯಾಗುವುದರ ಜೊತೆ ಜೊತೆಗೆ ಕೋಮಲತೆ, ಪಾವಿತ್ರ್ಯದ ಉದಾತ್ತ ತತ್ವಗಳನ್ನು ಸಾರುತ್ತದೆ.
ತುಳಸಿ ಕೇವಲ ಹಿಂದೂಗಳಿಗೆ ಮಾತ್ರ ಪವಿತ್ರವಲ್ಲ. ತುಳಸಿಯ ಬಗ್ಗೆ ಕ್ರೈಸ್ತರು, ಮುಸಲ್ಮಾನರಿಗೂ ಪೂಜ್ಯ ಭಾವನೆಯಿದೆ. ಕ್ರೈಸ್ತರು ತುಳಸಿ ಗಿಡವನ್ನು ಚರ್ಚ್ಗೆ ತೆಗೆದುಕೊಂಡು ಹೋಗಿ ಪೂಜಿಸಿ, ನಂತರ ಮನೆಯಂಗಳದಿ ನೆಟ್ಟು, ತಮ್ಮ ಮುಂದಿನ ಬದುಕು, ಸುಖ, ಶಾಂತಿಯಿಂದಿರಲೆಂದು ಪ್ರಾರ್ಥಿಸುತ್ತಾರೆ. ಸೂಫಿ ಪಂಥದಲ್ಲಿಯೂ ತುಳಸಿಯ ಪೂಜಿಸಲಾಗುತ್ತದೆ. ಅವರೂ ತುಳಸಿಗೆ ಮಾನ್ಯತೆ ನೀಡುತ್ತಾರೆ. ಜೈನರೂ ಪೂಜೆಗೆ ತುಳಸಿಯ ದಳ ಬಳಸುತ್ತಾರೆ. ಹಿಂದೂ ದೇವಾಲಯಗಳಲ್ಲಿ ತುಳಸಿ ಮಾಲೆಯಿಂದ ದೇವರನ್ನು ಅರ್ಚಿಸುತ್ತಾರೆ. | |||