|
ಮುಖಪುಟ
/ಸಾಧಕರು
ಪತ್ರಕರ್ತ, ನಾಟಕಕಾರ, ವಾಗ್ಮಿ ಸತೀಶ್
ಸಾವಿರ ಪದಬಂಧಗಳ
ಸರದಾರ ಸತೀಶ್ ಪರಿಚಯ
ಕವಿಯಾಗಿ,
ಲೇಖಕರಾಗಿ, ಪದಬಂಧ ರಚನೆಕಾರರಾಗಿ, ಕಥೆಗಾರರಾಗಿ, ನಾಟಕಕಾರರಾಗಿ, ವಾಗ್ಮಿಯಾಗಿ,
ನಟ-ನಿರ್ದೇಶಕರಾಗಿ, ದೂರದರ್ಶನ ವಾಹಿನಿಗಳಲ್ಲಿ ಕಾರ್ಯಕ್ರಮ ನಿರೂಪಕರಾಗಿ,
ಆಕಾಶವಾಣಿ ದೂರದರ್ಶನದಲ್ಲಿ ವಾರ್ತಾ ವಾಚಕರಾಗಿ, ವಕೀಲರಾಗಿ ವಿವಿಧ
ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸತೀಶ್ ಮೂಲತಃ ಪತ್ರಕರ್ತರು.
ಕನ್ನಡನಾಡಿನ
ಜನಪ್ರಿಯ ದಿನ ಪತ್ರಿಕೆ
‘ಕನ್ನಡಪ್ರಭ’ದಲ್ಲಿ
ಹನ್ನೆರಡು ವರ್ಷ ಕಾಲ ಸೇವೆ ಸಲ್ಲಿಸಿದ ಸತೀಶ್,
ಆನಂತರ ಕನ್ನಡದ ಮೊಟ್ಟ ಮೊದಲ ಪೋರ್ಟಲ್ ಕನ್ನಡ.ಇಂಡಿಯಾಇನ್ಫೋ.ಕಾಂನಲ್ಲಿ ಮುಖ್ಯ
ಉಪಸಂಪಾದಕರಾಗಿ ದುಡಿದರು. ಮುದ್ರಣ ಮಾಧ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮ ಹಾಗೂ
ಅಂತರ್ಜಾಲ ಮಾಧ್ಯಮದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಸತೀಶ್ ಬೆಂಗಳೂರು
ಆಕಾಶವಾಣಿ,
ದೂರದರ್ಶನ ಸುದ್ದಿ ವಿಭಾಗದಲ್ಲಿ ಕ್ಯಾಷುಯಲ್ ಎಡಿಟರ್(ಸಾಂದರ್ಭಿಕ ಸಂಪಾದಕ) ಆಗಿ,
ಕನ್ನಡರತ್ನ.ಕಾಂ ಹಾಗೂ ಮಾಸಿಕದ ಗೌರವ ಪ್ರಧಾನ ಸಂಪಾದಕರಾಗಿಯೂ ಸೇವೆ
ಸಲ್ಲಿಸಿದ್ದಾರೆ. ವಕೀಲರಾಗಿಯೂ ಕೆಲ ಕಾಲ ವೃತ್ತಿ ನಡೆಸಿದ ಸತೀಶ್ ಪತ್ರಿಕೋದ್ಯಮದ
ತುಡಿತದಿಂದ ಹೊರಬರಲಾಗದೆ ಹೈದ್ರಾಬಾದ್ ಕರ್ನಾಟಕ ಪ್ರದೇಶದಿಂದ ಪ್ರಕಟವಾಗುವ
ರಾಯಚೂರಿನ ‘ಸುದ್ದಿ
ಮೂಲ’
ದಿನಪತ್ರಿಕೆಯ ಬೆಂಗಳೂರು ವಿಶೇಷ ವರದಿಗಾರರಾಗಿ,
ಸುವರ್ಣ ಟೈಮ್ಸ್ ಆಫ್ ಕರ್ನಾಟಕ ಪತ್ರಿಕೆಯ ವರದಿಗಾರರಾಗಿಯೂ
ಸೇವೆ ಸಲ್ಲಿಸುತ್ತಿದ್ದಾರೆ.
www.ourtemples.in
ಅಂತರ್ಜಾಲ ತಾಣ ನಿರ್ಮಿಸಿರುವ ಸತೀಶ್ ರಾಜ್ಯದ ೩೫೦ಕ್ಕೂ ಹೆಚ್ಚು ದೇವಾಲಯಗಳ ಬಗ್ಗೆ
ಸಚಿತ್ರ ಲೇಖನ ಬರೆದಿದ್ದಾರೆ.
ಪದಬಂಧ ರಚನಕಾರರಾದ ಸತೀಶ್ 3 ಸಾವಿರಕ್ಕೂ ಹೆಚ್ಚು ಪದಬಂಧಗಳನ್ನು ಕನ್ನಡಪ್ರಭ
ದಿನಪತ್ರಿಕೆಗೆ ರಚಿಸಿದ್ದಾರೆ. ಅಂಕಣಕಾರರೂ ಆದ ಸತೀಶ್ ಅವರು ಬರೆದ ೪೦೦ಕ್ಕೂ
ಹೆಚ್ಚು ಅಂಕಣ ಬರಹಗಳು ಉದಯವಾಣಿ (ಪಹಣಿ ಪ್ರವರ),
ಉಷಾಕಿರಣ (ನಡೆನುಡಿ,
ಸಮ್ಮರ್ ಸ್ಪೆಷಲ್ ಮತ್ತು ದಿನಕ್ಕೊಂದು ಗಾದೆ,
ಗಾದೆಗೊಂದು ಕಥೆ),
ಹೊಸದಿಗಂತ (ಪರಿವೀಕ್ಷಣ) ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಈ ಸಾಧನೆಯನ್ನು
ಗುರುತಿಸಿ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡಮಿ 2010ರ ಸಾಲಿನ ಗೌರವ ಪ್ರಶಸ್ತಿ ನೀಡಿ
ಪುರಸ್ಕರಿಸಿದೆ. 2011ರ ನವೆಂಬರ್ 29ರಂದು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ
ನಡೆದ ಅದ್ದೂರಿ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಪ್ರಶಸ್ತಿ ನೀಡಿ
ಸತೀಶ್ ಅವರನ್ನು ಗೌರವಿಸಿದರು.
ಸಾಹಿತ್ಯ
ರಚನೆ ಪತ್ರಿಕೋದ್ಯಮದ ಜೊತೆಗೆ ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ
ಸತೀಶ್ ಉತ್ತಮ ಸಂಘಟಕರೂ ಹೌದು. ಕರ್ನಾಟಕದ ಎಲ್ಲ ಪತ್ರಕರ್ತರ ಮಾತೃ ಸಂಘಟನೆಯಾದ
‘ಕರ್ನಾಟಕ
ಕಾರ್ಯನಿರತ ಪತ್ರಕರ್ತರ ಸಂಘ’ದ
ಕಾರ್ಯದರ್ಶಿಯಾಗಿ,
ಉಪಾಧ್ಯಕ್ಷರಾಗಿ,
ಖಜಾಂಚಿಯಾಗಿ,
ರಾಷ್ಟ್ರೀಯ ಮಂಡಳಿ ಸದಸ್ಯರಾಗಿ,
ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ನಿರ್ದೇಶಕರಾಗಿ,
ಉಪಾಧ್ಯಕ್ಷರಾಗಿಯೂ ದುಡಿದಿದ್ದು,
ಸ್ವಾಮಿ ವಿವೇಕಾನಂದ ಪ್ರಸಾರ ಕೇಂದ್ರದ ಸಂಚಾಲಕರಾಗಿ,
ಕರ್ನಾಟಕ ಚರ್ಚಾವೇದಿಕೆಯ ಉಪಾಧ್ಯಕ್ಷರಾಗಿ ರಾಜ್ಯದ ವಿವಿಧ ಶಾಲೆ -ಕಾಲೇಜುಗಳಲ್ಲಿ
ಸಾವಿರಾರು ಕಾರ್ಯಕ್ರಮ ನಡೆಸಿದ್ದಾರೆ.
2011ರ
ಡಿಸೆಂಬರ್ 9, 10 ಹಾಗೂ 11ರಂದು ಗಂಗಾವತಿಯಲ್ಲಿ ನಡೆದ 78ನೇ ಅಖಿಲ ಭಾರತ ಕನ್ನಡ
ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಮಾತು ತಲೆಎತ್ತುವ ಬಗೆ ಗೋಷ್ಠಿಯಲ್ಲಿ
ವಿದ್ಯುನ್ಮಾನ ಮಾಧ್ಯಮದಲ್ಲಿ ಕನ್ನಡದ ಸ್ಥಿತಿ ಕುರಿತು ಸತೀಶ್ ಉಪನ್ಯಾಸ
ನೀಡಿದ್ದಾರೆ. ರಾಜ್ಯದ ವಿವಿಧ ಪತ್ರಿಕೋದ್ಯಮ ಕಾಲೇಜುಗಳಲ್ಲಿ ಗೌರವ ಉಪನ್ಯಾಸವನ್ನೂ
ನೀಡಿರುವ ಸತೀಶ್ ಅವರು ಕರ್ನಾಟಕ ಮಾಧ್ಯಮ ಅಕಾಡಮಿ ಶೇಷಾದ್ರಿಪುರಂ ಕಾಲೇಜಿನ
ಸಹಯೋಗದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ
ಅಂತರ್ಜಾಲ ಪತ್ರಿಕೋದ್ಯಮದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ್ದಾರೆ. ಕರ್ನಾಟಕ
ಕಾರ್ಯನಿರತ ಪತ್ರಕರ್ತರ ಸಂಘ ಬೆಳಗಾವಿಯಲ್ಲಿ ಏರ್ಪಡಿಸಿದ್ದ ಸಮ್ಮೇಳನದಲ್ಲೂ ಅವರು,
ಅಂತರ್ಜಾಲ ಪತ್ರಿಕೋದ್ಯಮದ ಬಗ್ಗೆ ಉಪನ್ಯಾಸ ನೀಡಿದ್ದಾರೆ.
ಕನ್ನಡಪ್ರಭ
ದಿನಪತ್ರಿಕೆಗೆ ನಿತ್ಯಪ್ರಭ, ಪದಪ್ರಭ ಹೆಸರಿನಲ್ಲಿ 3 ಸಾವಿರ ಪದಬಂಧಗಳನ್ನು
ರಚಿಸಿರುವ ಸತೀಶ್ ಅವರಿಗೆ ಶಿವಮೊಗ್ಗದಲ್ಲಿ ನಡೆದ ೨೧ನೇ ರಾಜ್ಯಮಟ್ಟದ ಪತ್ರಕರ್ತರ
ಸಮ್ಮೇಳನದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ವಾರ್ಷಿಕ ವಿಶೇಷ ಪ್ರಶಸ್ತಿ ನೀಡಿ
ಗೌರವಿಸಲಾಗಿತ್ತು. ೧೯೯೮ರ ಡಿಸೆಂಬರ್ ೨ರಂದು ಶ್ರೀಲಂಕಾದ ಕೊಲಂಬೋದಲ್ಲಿ ನಡೆದ
ಪತ್ರಕರ್ತರ ಸಮಾವೇಶದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರತಿನಿಯಾಗಿ
ಪಾಲ್ಗೊಂಡಿದ್ದಾರೆ. ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ
ಮಂಡಳಿ ಸದಸ್ಯರಾಗಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಪತ್ರಕರ್ತರ ಸಮಾವೇಶಗಳಲ್ಲಿ
ಪಾಲ್ಗೊಂಡಿದ್ದಾರೆ.
ಆಶುಭಾಷಣ
ಸ್ಪರ್ಧೆ,
ಏಕಪಾತ್ರಾಭಿನಯ,
ಅಂತರಕಾಲೇಜು ನಾಟಕ ಸ್ಪರ್ಧೆಗಳಲ್ಲೂ ಸತೀಶ್, ಹಲವಾರು ಬಹುಮಾನಗಳನ್ನು
ಗಳಿಸಿದ್ದಾರೆ. ವೇದಿಕೆಯಲ್ಲಿ
ನಿಂತು ಜನ ಮೆಚ್ಚಿ ಕರತಾಡನ ಮಾಡುವಂತೆ ಮಾತನಾಡುವುದು ಸತೀಶ್ ಅವರಿಗೆ
ಕರಗತವಾಗಿದೆ.
ಶಾಲೆ ಕಾಲೇಜು
ದಿನಗಳಿಂದಲೂ ಚರ್ಚಾಸ್ಪರ್ಧೆಗಳಲ್ಲಿ ಪಾಲ್ಗೊಂಡು ೩೦೦ಕ್ಕೂ ಹೆಚ್ಚು ವೈಯಕ್ತಿಕ
ಬಹುಮಾನ ಹಾಗೂ ೧೦೦ಕ್ಕೂ ಹೆಚ್ಚು ಪರ್ಯಾಯ ಪಾರಿತೋಷಕ ಪಡೆದಿರುವ ಸತೀಶ್ ಮಾತನಾಡಲು
ವೇದಿಕೆಯಲ್ಲಿ ನಿಂತರೆಂದರೆ ನಿರರ್ಗಳವಾಗಿ ಪ್ರಾಸಮಯ ವಾಗ್ಝರಿ ಉಕ್ಕಿ ಹರಿಯುತ್ತದೆ.
ಕೇಳುಗರು ಮಂತ್ರಮುಗ್ಧರಾಗುತ್ತಾರೆ. ಕರತಾಡನ ಮಾಡಿ ಮೆಚ್ಚುಗೆಯ ಮಾತನಾಡುತ್ತಾರೆ.
ಸತೀಶ್
ರಚಿಸಿದ ಹಾಗೂ ರೂಪಾಂತರಿಸಿದ
‘ಹೆತ್ತೊಡಲು’
‘ವೆಂಕಟರಾಯನ
ಪಿಶಾಚ’
‘ಒಂದು
ಸಾವಿನ ಸುತ್ತ’
‘ಚಿನ್ನದಹೂವು’
‘ಹುತ್ತದಿಂದ
ಎದ್ದು ಬಂದಾತ’
‘ನಡುರಾತ್ರಿ
ಹನ್ನೆರಡು’
‘ಅರಿವು
ಕಣ್ತೆರೆಯಿತು’
‘ಕಂಪಾರ್ಟ್ಮೆಂಟ್ನಲ್ಲೂಂದು
ಕೊಲೆ’
ಸೇರಿದಂತೆ ೨೬ನಾಟಕ,
ರೂಪಕಗಳನ್ನು ರಚಿಸಿದ್ದು ಎಲ್ಲ ನಾಟಕ,
ರೂಪಕಗಳೂ ಬೆಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಹಲವಾರು ನಾಟಕಗಳು ಮಂಗಳೂರು,
ಭದ್ರಾವತಿ,
ಚಿತ್ರದುರ್ಗ ಆಕಾಶವಾಣಿ ಕೇಂದ್ರಗಳಿಂದಲೂ ಮರುಪ್ರಸಾರ ಆಗಿವೆ.
ನಾಟಕಕಾರರಷ್ಟೇ ಅಲ್ಲದೆ ರಂಗ ಕಲಾವಿದರೂ ಆದ ಸತೀಶ್ ತಾವೇ ಕಟ್ಟಿದ
‘ನಟ
ಕಲಾವಿದರು’
ತಂಡದಿಂದ ಹಲವಾರು ರಂಗಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಹಲವಾರು
ನಾಟಕಗಳನ್ನೂ ನಿರ್ದೇಶಿಸಿದ್ದಾರೆ.
ಮೂಲತಃ
ತುಮಕೂರು ಜಿಲ್ಲೆಯ ತುರುವೇಕೆರೆಯವರಾದ ಸತೀಶ್ ಬಿ.ಕಾಂ,
ಎಲ್ಎಲ್ಬಿ ಪದವೀಧರರು. ಆಕಾಶವಾಣಿ,
ದೂರದರ್ಶನಗಳಲ್ಲಿ ನೂರಾರು ಕಾರ್ಯಕ್ರಮಗಳನ್ನು ನೀಡಿರುವ ಸತೀಶ್,
‘ಜೀವಜಗತ್ತು
’
ಮೊದಲಾದ ದೂರದರ್ಶನದ ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಸತೀಶ್ ಕವಿವಾಣಿ,
ಮಂಕುತಿಮ್ಮನ ಕಗ್ಗ,
ಸರ್ವಜ್ಞ ವಚನ,
ಸುಭಾಷಿತಗಳನ್ನು ಸೂಕ್ತವಾಗಿ ಬಳಸಿಕೊಂಡು,
ತಮ್ಮ
ಪ್ರಾಸಮಯ ವಾಗ್ಝರಿಯಿಂದ ವಿಭಿನ್ನ ಶೈಲಿಯಲ್ಲಿ ಕಾರ್ಯಕ್ರಮಗಳನ್ನೂ
ನಿರೂಪಿಸುತ್ತಾರೆ. ಭಾರತ ಸರ್ಕಾರದ ವಾರ್ತಾ ಶಾಖೆ ನಡೆಸುವ ಭಾರತ ನಿರ್ಮಾಣ
ಸಾರ್ವಜನಿಕ ಮಾಹಿತಿ ಆಂದೋಲನದ ಹಲವು ಕಾರ್ಯಕ್ರಮಗಳಲ್ಲಿ ಸತೀಶ್ ಸಮರ್ಥವಾಗಿ
ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ.
ಕಲೆ,
ಸಾಹಿತ್ಯ,
ಚಲನಚಿತ್ರ,
ಕ್ರೀಡೆ,
ವಾಣಿಜ್ಯ,
ವಿಜ್ಞಾನ,
ವ್ಯಕ್ತಿತ್ವ ವಿಕಾಸ... ಹೀಗೆ ವಿವಿಧ ವಿಭಾಗಗಳಲ್ಲಿ ಸತೀಶ್ ಬರೆದಿರುವ ನೂರಾರು
ಲೇಖನಗಳು ಪ್ರಕಟವಾಗಿವೆ. ವಿವಿಧ ವಿಷಯಗಳ ಬಗ್ಗೆ ಸತೀಶ್ ವಿಚಾರಗೋಷ್ಠಿಗಳಲ್ಲಿ ತಮ್ಮ
ವಿಚಾರಧಾರೆ
ಹರಿಸಿದ್ದಾರೆ.
ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ
೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಾಧ್ಯಮ ಸಮಿತಿ ಸಂಚಾಲಕರಾಗಿಯೂ
ಸತೀಶ್ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ
ರಾಜ್ಯೋತ್ಸವ ಕವಿಗೋಷ್ಠಿ ಸೇರಿದಂತೆ ಹಲವು ಕವಿಗೋಷ್ಠಿಗಳಲ್ಲಿ ಸ್ವರಚಿತ ಕವನ ವಾಚನ
ಮಾಡಿದ್ದಾರೆ.
ಸಾಹಿತ್ಯ ಕಲೆ,
ಸಂಸ್ಕೃತಿ,
ಸಮಾಜ
ಸೇವೆ,
ಪತ್ರಿಕೋದ್ಯಮ
ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಸತೀಶ್ ಅವರನ್ನು ಈ
ನಾಡಿನ ಹಾಗೂ ಹೊರನಾಡಿನ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಗೌರವಿಸಿವೆ.
ಟಿ.ಎಂ.ಸತೀಶ್ ಬಗ್ಗೆ
ಪತ್ರಿಕೆಗಳಲ್ಲಿ ಬಂದಿರುವ ಕೆಲವು ಲೇಖನಗಳು
ಮುಖಪುಟ
/ಸಾಧಕರು |