|
ಮುಖಪುಟ
/ಸುದ್ದಿ
ಸಮಾಚಾರ ಬಸ್ ನಿಲ್ದಾಣಗಳೀಗೆ ಹೆಚ್ಚಿನ ಭದ್ರತೆ:ಆರ್. ಅಶೋಕ್ ಬೆಂಗಳೂರು ಡಿ. 13: ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತೆ ರಾಜ್ಯದ ಪ್ರಮುಖ ಬಸ್ ನಿಲ್ದಾಣಗಳಿಗೆ ಭದ್ರತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಈ ಸಂಬಂಧ ಮುಖ್ಯ ಭದ್ರತಾ ಅಧಿಕಾರಿ ಸೇರಿದಂತೆ ೧೫೩ ಮಂದಿ ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು. ಬಸ್ ನಿಲ್ದಾಣಗಳಿಗೆ ಬರುವವರನ್ನು ತಪಾಸಣೆಗೊಳಪಡಿಸಲು ಈಗಾಗಲೇ ಸಿ. ಸಿ. ಕ್ಯಾಮರಾ ಹಾಗೂ ಲೋಹ ತಪಾಸಣೆ ಯಂತ್ರಗಳನ್ನು ಅಳವಡಿಸಲಾಗಿದೆ. ಇದಲ್ಲದೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪೂರ್ಣ ಪ್ರಮಾಣದ ಪೊಲೀಸ್ ಠಾಣಿಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದರು. ಕೆ.ಎಸ್.ಆರ್. ಟಿ.ಸಿ., ಬಿ.ಎಂ.ಟಿ.ಸಿ. ಸೇರಿದಂತೆ ಸಾರಿಗೆ ಸಂಸ್ಥೆಯ ನಾಲ್ಕು ಸಂಸ್ಥೆಗಳ ನೌಕರರಿಗೆ ಶೇ ೬ ರಷ್ಟು ವೇತನ ಹೆಚ್ಚಳ ಮಾಡಲಾಗಿದ್ದು, ಇದು ಕಳೆದ ಸಾಲಿನ ಏಪ್ರಿಲ್ ತಿಂಗಳಿಂದ ಅನ್ವಯವಾಗಲಿದೆ ಎಂದು ಪ್ರಕಟಿಸಿದ ಸಾರಿಗೆ ಸಚಿವರು ಹುಬ್ಬಳ್ಳಿ ಸಾರಿಗೆ ಸಂಸ್ಥೆ ಹೊರತುಪಡಿಸಿ ಉಳಿದ ಮೂರು ಸಾರಿಗೆ ಸಂಸ್ಥೆಗಳು ಲಾಭದಲ್ಲಿವೆ. ಹುಬ್ಬಳ್ಳಿ ವಿಭಾಗದಲ್ಲಿ ಸುಮಾರು ೨೦೦ ಕೋಟಿ ರೂ ಸೋರಿಕೆಯಾಗಿದ್ದು, ಇದರ ತನಿಖೆ ಮಾಡಲು ೧೦ ಜನರ ತನಿಖಾ ತಂಡ ರಚಿಸಲಾಗಿದೆ. ತನಿಖೆಯಿಂದ ಹೊರಬಂದ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು. | |||